ರಾಮ ಮಂದಿರ ಆಡಳಿತಕ್ಕೆ ಹೊಸ ಸಾರಥಿ: ಮೊದಲ ಸಿಇಒ ಆಗಿ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ

ಅಯೋಧ್ಯೆ (ಉತ್ತರ ಪ್ರದೇಶ): ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮ ಮಂದಿರದ ಆಡಳಿತ ನಿರ್ವಹಣೆಗಾಗಿ ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಿದೆ.
ಈ ಹುದ್ದೆಗೆ ಬರೋಬ್ಬರಿ 5,585 ಅರ್ಜಿಗಳು ಬಂದಿದ್ದು, ಹಲವು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಯ ಬಳಿಕ ಮಿಶ್ರಾ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
ಸಿಇಒ ಆಯ್ಕೆ ಪ್ರಕ್ರಿಯೆಯಲ್ಲಿ ಎಐ ಆಧಾರಿತ ಪರಿಶೀಲನೆ ಹಾಗೂ ಮಾನವ ಚಾಲಿತ ಮೌಲ್ಯಮಾಪನವನ್ನು ಸಂಯೋಜಿಸಲಾಗಿತ್ತು. 600 ಅಂಕಗಳ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳ ಪರಿಶೀಲನೆ ನಡೆಸಿ, ಅಂತಿಮ ಹಂತದಲ್ಲಿ ಆಯ್ದ ಅಭ್ಯರ್ಥಿಗಳಿಗೆ ವರ್ಚುವಲ್ ಸಂವಾದ ಹಾಗೂ ಅಯೋಧ್ಯೆಯಲ್ಲಿ ನೇರ ಸಂದರ್ಶನ ನಡೆಸಲಾಗಿತ್ತು.
ಸಾಂಸ್ಥಿಕ ನಾಯಕತ್ವ, ಆಡಳಿತಾತ್ಮಕ ಪರಿಣತಿ, ಪ್ರಾಮಾಣಿಕತೆ ಮತ್ತು ದೂರದೃಷ್ಟಿಯನ್ನು ಪರಿಗಣಿಸಿ ಜಿತೇಂದ್ರ ಮಿಶ್ರಾ ಅವರನ್ನು ಟ್ರಸ್ಟ್ ಮೊದಲ ಸಿಇಒ ಆಗಿ ಆಯ್ಕೆ ಮಾಡಿದೆ.
ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಪ್ರಮುಖ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನೇಮಕಾತಿಗೆ ಅಂತಿಮ ಮುದ್ರೆ ಹಾಕಲಾಗಿದೆ.
