ಮಣಿಪಾಲ: ಸ್ವಾತಂತ್ರ್ಯೋತ್ಸವದಂದು ಅಂಗವಿಕಲ ಯುವತಿಗೆ ನೆರವಿನ ಹಸ್ತ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕ – ಮಾಲಕರು

ವರದಿ: ಅಬ್ದುಲ್ ರಶೀದ್ ಮಣಿಪಾಲ
ಮಣಿಪಾಲ: ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆ ಮಣಿಪಾಲ ಆಟೋರಿಕ್ಷಾ ಚಾಲಕ – ಮಾಲಕರು ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿರುವ 18 ವರ್ಷದ ಅಂಗವಿಕಲ ಯುವತಿಗೆ ನೆರವಿನ ಹಸ್ತ ನೀಡಿ ಮಾನವೀಯತೆಯ ಸಂದೇಶ ನೀಡಿದ್ದಾರೆ.
ದಿನೇಶ್ (ಅಪರಂಜಿ ರಿಕ್ಷಾ) ಅವರ ನೇತೃತ್ವದಲ್ಲಿ ಮಣಿಪಾಲದ ಆಟೋ ರಿಕ್ಷಾ ಚಾಲಕ, ಮಾಲಕರು ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟ ನಿವಾಸಿ ಸುದೀಕ್ಷಾ ಪೂಜಾರಿ ಅವರ ಕುಟುಂಬಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಹಾಯಧನ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.

ಸುದೀಕ್ಷಾ ಅವರು ತಂದೆಯನ್ನು ಕಳೆದುಕೊಂಡಿದ್ದು, ಅವರ ತಾಯಿ ಒಬ್ಬರೇ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಆಟೋ ಚಾಲಕ, ಮಾಲಕರು 3 ಚೀಲ ಅಕ್ಕಿ, 3 ಬೆಡ್ಶೀಟ್, 2 ಚಾಪೆ ಹಾಗೂ ₹7,250 ಧನಸಹಾಯವನ್ನು ನೀಡುವ ಮೂಲಕ ಕುಟುಂಬಕ್ಕೆ ನೆರವಾದರು.
ಸ್ವಾತಂತ್ರ್ಯೋತ್ಸವದಂತಹ ರಾಷ್ಟ್ರೀಯ ಹಬ್ಬವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವ ಕುಟುಂಬದ ನೋವಿಗೆ ಸ್ಪಂದಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮಾದರಿಯಾಗಿರುವ ಈ ನಡೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
